ತೋವಿನಕೆರೆ: ಸನ್ಮಿತ್ರ ಸಹಕಾರ ವೇದಿಕೆಯ ದಶಮಾನೋತ್ಸವದ ಪ್ರಯುಕ್ತ ತೋವಿನಕೆರೆಯ ನಾಗರೀಕ ಸಮಿತಿ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸಂಯಕ್ತಾಶ್ರಯದಲ್ಲಿ ಅ.23 ರ ಭಾನುವಾರ ಬೆಳಿಗ್ಗೆ 8:30ರಿಂದ ’ನಮ್ಮೂರ ಹಬ್ಬ’ ಆರಂಭಗೊಳ್ಳಲಿದೆ.
ನಂಧಿಧ್ವಜ, ವೀರಗಾಸೆ, ಮಂಗಳವಾದ್ಯ, ಚಿಟ್ಟಮೇಳ, ನಾಸಿಕ್ಡೋಲ್, ಡೊಳ್ಳುಕುಣಿತ, ಕೀಲುಕುದುರೆ, ಕೋಲಾಟ, ಭಜನೆ, ಭಕ್ತಿಗೀತೆಗಳು ಮುಂತಾದ ಜನಪದ ಕಲಾತಂಡಗಳೊಂದಿಗೆ ತೋವಿನಕೆರೆಯಲ್ಲಿ ನೆಲೆಸಿರುವ ಎಲ್ಲಾ ದೇವತೆಗಳ ಬೆಳ್ಳಿರಥದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ಸನ್ಮಿತ್ರ ಸಹಕಾರ ವೇದಿಕೆಯು 2012 ಸೆಪ್ಟೆಂಬರ್ 16 ರಂದು ಪ್ರಾರಂಭಗೊಂಡು ಸಮಾನ ಮನಸ್ಕರೊಂದಿಗೆ ಗುರುವಂದನೆ ಕಾರ್ಯಕ್ರಮ, ಉಚಿತ ಆರೋಗ್ಯ ಶಿಬಿರಗಳು, ಕ್ರೀಡಾ ಸ್ಪರ್ಧೆಗಳಿಗೆ ಸಹಾಯ ಹಸ್ತ ಇನ್ನೂ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಸನ್ಮಿತ್ರ ಸಹಕಾರ ವೇದಿಕೆ ಸ್ಥಾಪನೆಗೊಂಡು ಹತ್ತು ವರ್ಷಗಳು ಸಂದ ಹಿನ್ನಲೆಯಲ್ಲಿ ಊರಿನ ನಾಗರೀಕರೆಲ್ಲರೂ ಸೇರಿ ಎಲ್ಲಾ ದೇವರುಗಳ ಉತ್ಸವ ಏರ್ಪಡಿಸಿದ್ದು, ನಮ್ಮೂರ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮತ್ತು ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ.ಹನುಮಂತನಾಥ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಲಿದ್ದು, ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳುವರು.