ಕೊರಟಗೆರೆ: ತಹಶೀಲ್ದಾರ್ ನಹೀದಾ ಜಮ್ ಜಮ್ ರವರ ಕಾರ್ಯದಕ್ಷತೆ ಹಾಗೂ ಕಾರ್ತವ್ಯ ನಿಷ್ಠೆ ಎಷ್ಟಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಹೌದು ಕೊರಟಗೆರೆ ತಾಲ್ಲೂಕಿನ ಅಲೆಮಾರಿ ಜನಾಂಗದವರು ಇಷ್ಟು ವರ್ಷಗಳ ಕಾಲ ಅನುಭವಿಸಿದ್ದ ಯಾತನೆ, ನೋವುಗಳೆಲ್ಲಾ ಕಳೆದು ಮರು ಜೀವನ ನಡೆಸಲು, ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ತಾಲ್ಲೂಕಿನ ಜನಸ್ನೇಹಿ ತಹಶಿಲ್ದಾರ್ ಎಂದೇ ಖ್ಯಾತಿ ಪಡೆದ ನಹೀದಾ ಜಮ್ ಜಮ್ ರವರು ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪಣ ತೊಟ್ಟು ನಿಂತಿದ್ದಾರೆ.
ಮೂರು ತಿಂಗಳಿಂದ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ ೩೧ರಲ್ಲಿ ಒಂದು ಎಕರೆ ಜಮೀನಿನಲ್ಲಿ ಅಲೆಮಾರಿ ಕುಟುಂಬಸ್ಥರಿಗೆ ೧೯ ನಿವೇಶನಗಳು ಸಿದ್ಧವಾಗುತ್ತಿವೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಉನ್ನತ ಅಧಿಕಾರಿಗಳ ತಂಡ ಅಲೆಮಾರಿ ಜನಾಂಗದ ೧೯ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸೌಕರ್ಯ ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದ್ದು, ನಿವೇಶನದ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಸುಮಾರು ೧.ಕಿ.ಮೀ ರಸ್ತೆ ನಿರ್ಮಾಣವಾಗಿದ್ದು ಜನರು ಓಡಾಡಲು ಇದ್ದ ಸಮಸ್ಯೆ ಆದಷ್ಟು ಬಗೆಹರಿದಿದೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದ್ದಾರೆ, ಸ್ಥಳಕ್ಕೆ ಆಹಾರ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕರೆಸಿ ಸ್ಥಳದಲ್ಲಿಯೇ ಅವರಿಗೆ ಅವಶ್ಯಕತೆ ಇರುವ ಸವಲತ್ತುಗಳನ್ನು ಒದಗಿಸಿ ಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಅಲೆಮಾರಿ ೧೯ ಕುಟುಂಬಗಳಿಗೆ ಮನೆ ನಿರ್ಮಿಸುವಂತೆ ಈಗಾಗಲೇ ಅಧ್ಯಕ್ಷರು ಹಾಗೂ ಪಿಡಿಒ ರವರ ಗಮನಕ್ಕೆ ತಂದಿದ್ದಾರೆ.
ನನಗೆ ಪ್ರಚಾರ ಮಾಡುವುದು ಇಷ್ಟವಿಲ್ಲ, ನಾನು ಮಾಡುವ ಕೆಲಸಗಳು ಜನರಿಗೆ ಹಾಗೂ ದೇವರಿಗೆ ಮೆಚ್ಚುಗೆ ಆದರೆ ಸಾಕು, ಜನರ ಕೆಲಸವೇ ದೇವರ ಕೆಲಸ ಎಂದು ನನ್ನ ಕೈಲಿ ಆದಷ್ಟು ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜನರು ಅನೇಕ ಸಮಸ್ಯೆಗಳನ್ನು ಹೇಳಿಕೊಂಡು ನನ್ನ ಬಲಿ ಬರುತ್ತಾರೆ. ನಾನು ಕೂಡಾ ಸಾದ್ಯವಾದಷ್ಟು ಪ್ರಯತ್ನಿಸಿ ಅವರ ಕಷ್ಟಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ತಾಲ್ಲೂಕಿನ ಅನೇಕ ಗ್ರಾಮಗಳು ಇನ್ನೂ ಮೂಲಭೂತ ಸವಲತ್ತುಗಳಿಲ್ಲದೇ ಬಳಲುತ್ತಿದ್ದು, ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ಸೌಕರ್ಯ ಒದಗಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಇನ್ನೂ ಸಂಬಂಧಪಟ್ಟ ಅಧಿಕಾರಿಗಳ ಸಹಕಾರದಿಂದ ಸರ್ಕಾರದಿಂದ ಬರುವ ಅನುದಾನಗಳನ್ನು ಸಮರ್ಪಕವಾಗಿ ಜನರ ಕಷ್ಟಗಳಿಗೆ ಸಕಾಲಕ್ಕೆ ಸೇರುವಂತೆ ಕೆಲಸಗಳನ್ನು ಮಾಡುತ್ತಿದ್ದೇವೆ. ನಮ್ಮ ಇಲಾಖೆಯ ಎಲ್ಲರ ಸಹಕಾರ ಅಗಾಧವಾಗಿದೆ.
- ತಹಶೀಲ್ದಾರ್ ನಹೀದಾ ಜಮ್ ಜಮ್
ಒಟ್ಟಿನಲ್ಲಿ ಕೊರಟಗೆರೆ ತಾಲ್ಲೂಕಿನ ಅನೇಕ ಹಳ್ಳಿಗಳಿಗೆ ಅವಶ್ಯಕವಾಗಿರುವ ಸವಲತ್ತುಗಳನ್ನು ನೀಡಿ ಜನರ ಮನಸ್ಸನ್ನು ಗೆದ್ದಿರುವ ಹೆಗ್ಗಳಿಕೆಗೆ ತಹಶೀಲ್ದಾರ್ ನಹೀದಾ ಜಮ್ ಜಮ್ ಪಾತ್ರರಾಗಿದ್ದಾರೆ. ಸಾರ್ವಜನಿಕರ ಕಷ್ಟ, ಸಮಸ್ಯೆಗಳುನ್ನು ತಮ್ಮದೇ ಸಮಸ್ಯೆ ಎಂಬAತೆ ಸ್ಪಂದಿಸುವ ಅಧಿಕಾರಿಯಾಗಿ ಸಾರ್ವಜನಿಕರಿಂದ ಜನಸ್ನೇಹಿ ಎಂದೇ ಪ್ರಸಿದ್ದಿಯಾಗಿದ್ದಾರೆ. ಇವರ ಅಧಿಕಾರವಧಿಯಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ತಾಲ್ಲೂಕಿನ ಜನತೆಗೆ ಆಗಲಿ ಎಂಬುದು ಸಾರ್ವಜನಿಕರ ಮಾತಾಗಿದೆ.
ವರದಿ : ಹರೀಶ್ ಬಾಬು ಬಿ.ಹೆಚ್. ಕೊರಟಗೆರೆ.