ಗುಬ್ಬಿ: ತಾಲ್ಲೂಕಿನ ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುತೂಹಲ ನಡುವೆ ಸಮಬಲದ ಹೋರಾಟ ಕಂಡು ಲಾಟರಿ ಮೂಲಕ ಕಡಬ -1 ಕ್ಷೇತ್ರದ ಆರ್.ರಂಗನಾಥ್ ಗೆಲುವು ಸಾಧಿಸಿದರು.
ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಸಾಮಾನ್ಯ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಸಿ.ಕೆ.ಗೌಡ ರಾಜೀನಾಮೆ ನೀಡಿ ತೆರವಾಗಿದ್ದ ಕಾರಣ ನಡೆದ ಈ ಚುನಾವಣೆಯಲ್ಲಿ ಕಡಬ-1 ಕ್ಷೇತ್ರದ ಆರ್.ರಂಗನಾಥ್ ಹಾಗೂ ಕಡಬ -3 ಕ್ಷೇತ್ರದ ಪುರುಷೋತ್ತಮ್ ಅಭ್ಯರ್ಥಿಗಳಾಗಿ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಒಟ್ಟು 16 ಮಂದಿ ಸದಸ್ಯರ ಮತದಾನ ಪ್ರಕ್ರಿಯೆ ಆರಂಭವಾಗಿ ಅಂತಿಮವಾಗಿ ಇಬ್ಬರೂ 8 ಮತಗಳ ಸಮ ಬಲ ಹೋರಾಟ ಕಂಡು ಬಂತು. ನಂತರ ಶಾಲಾ ವಿದ್ಯಾರ್ಥಿಯ ಕೈಯಲ್ಲಿ ಲಾಟರಿ ಎತ್ತುವ ಮೂಲಕ ಆರ್.ರಂಗನಾಥ್ ಅವರಿಗೆ ಅದೃಷ್ಟ ಒಲಿಯಿತು.
ನೂತನ ಅಧ್ಯಕ್ಷ ಆರ್.ರಂಗನಾಥ್ ಸುದ್ದಿಗಾರರ ಜತೆ ಮಾತನಾಡಿ, ಲಾಟರಿ ಮೂಲಕ ಜಯಗಳಿಸಿದ ನಾನು ಎಲ್ಲಾ ಸದಸ್ಯರ ಒಮ್ಮತ ಪಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರಸ್ತೆ ಒದಗಿಸುವ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ಸದಸ್ಯರ ಒಮ್ಮತ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಉಪಾಧ್ಯಕ್ಷೆ ಪುಟ್ಟತಾಯಮ್ಮ, ಸದಸ್ಯರಾದ ನಾಗರತ್ನಮ್ಮ, ಕಾಡಶೆಟ್ಟಿ ಸತೀಶ್, ಭರತ್ ಗೌಡ, ಕವಿತಾ, ಕಲ್ಪನಾ, ಜಯಶ್ರೀ, ಮುಖಂಡರಾದ ರಾಜೇಶ್, ಎಸ್.ಡಿ.ದಿಲೀಪ್ ಕುಮಾರ್, ಕೆ.ಎನ್.ಬಾಲಕೃಷ್ಣ, ದರ್ಶನ್, ಉಲ್ಲಾಸ್, ವಿಕಾಸ್ ಸೇರಿದಂತೆ ಎಲ್ಲರೂ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪಿಡಿಓ ನಟರಾಜ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.