ಗುಬ್ಬಿ: ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಸಂಘಟನೆಗೆ ದುಡಿದ ನಾನು ಮೂರು ಬಾರಿ ಟಿಕೆಟ್ ವಂಚಿತನಾಗಿದ್ದೆ. ನನ್ನಂತಹ ನಿಷ್ಠಾವಂತ ಕಾರ್ಯಕರ್ತನನ್ನು ಬಾರಿ ಬಿಜೆಪಿ ಪಕ್ಷ ಗುರುತಿಸಿ ಟಿಕೆಟ್ ಕೊಡಲಿದೆ ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಗಲು ಇರುವ ಆಕಾಂಕ್ಷಿಗಳ ಪೈಕಿ ನನಗೆ ಟಿಕೆಟ್ ಸಿಗುವ ಸಕಾರಾತ್ಮಕ ವಿಶ್ವಾಸ ಕಂಡಿದೆ. ಜಿಪಂ ಸದಸ್ಯನಾಗಿ ಅಭಿವೃದ್ದಿ ಕೆಲಸ ಸಾಕಷ್ಟು ಮಾಡಿದ್ದೇನೆ. ಜನರು ಗುರುತಿಸುವ ಕೆಲಸ ಮಾಡಿರುವ ಹಿನ್ನಲೆ ಬಿಜೆಪಿ ಹೈಕಮಾಂಡ್ ಕೂಡಾ ನನ್ನನ್ನು ಗುರುತಿಸಲಿದೆ ಎಂದರು.
1992 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ತಕ್ಷಣ ಬಿಜೆಪಿ ಸೇರಿ ಸಕ್ರಿಯ ಕಾರ್ಯಕರ್ತನಾಗಿ ದುಡಿದೆ. ಅಂದಿನ ಎಸ್.ಮಲ್ಲಿಕಾರ್ಜುನಯ್ಯ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಪಕ್ಷ ಸಂಘಟನೆಯನ್ನು ಧೃಡ ನಿರ್ಧಾರದಲ್ಲಿ ನಡೆಸಿದ್ದೆವು. ಚುನಾವಣೆಗೆ ಅಭ್ಯರ್ಥಿಗಳು ಸಿಗದ ಸಂದರ್ಭದಲ್ಲಿ ಐದು ಬಾರಿ ಪಕ್ಷ ಚಿಜ್ಞೆಯಲ್ಲಿ ಚುನಾವಣೆ ಎದುರಿಸಿದ್ದೆ. ಜಿಪಂ ಸದಸ್ಯನಾಗಿ ನಾನು ಮತ್ತು ನನ್ನ ಪತ್ನಿ ನವ್ಯಾ ಅವರು ಜಿಪಂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಿದ್ದೇವೆ. ವಿಶೇಷ 7.50 ಕೋಟಿ ರೂಗಳ ಅನುದಾನ ತಂದು ಡಾಂಬರ್ ಹಾಗೂ ಸಿಸಿ ರಸ್ತೆ ನಿರ್ಮಿಸಿದ್ದೇನೆ. ಸತತವಾಗಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಕೆಲಸ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಟಿಕೆಟ್ ಕೇಳುವ ಅರ್ಹತೆ ನನಗಿದೆ ಎಂದರು.
ಬಿಜೆಪಿ ಪಕ್ಷವು ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡುವ ಪ್ರಕ್ರಿಯೆಯನ್ನು ಗುಜರಾತ್ ರಾಜ್ಯದಲ್ಲಿ ತೋರಿದೆ. ಅಲ್ಲಿ ವಿಶ್ವಾಸ ಗಳಿಸದ 38 ಮಂದಿ ಹಾಲಿ ಶಾಸಕರನ್ನು ಬದಲಿಸಿದ್ದು ಸಹ ಕಂಡಿದೆ. ಈ ಎಲ್ಲಾ ಚಟುವಟಿಕೆ ಮಧ್ಯೆ ನನ್ನ ಕಾರ್ಯ ವೈಖರಿ ಸಾಮಾನ್ಯರಿಗೆ ತಿಳಿದಿದೆ. ಗುಪ್ತ ಮಾಹಿತಿ ಕಲೆ ಹಾಕಿದರೂ ನನ್ನ ಬಗ್ಗೆ ಒಲವು ಸಿಗಲಿದೆ ಎಂದ ಅವರು ಟಿಕೆಟ್ ಆಕಾಂಕ್ಷಿಯಾಗಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಮಾಧುಸ್ವಾಮಿ ಹಾಗೂ ಸಂಸದ ಜಿ.ಎಸ್.ಬಸವರಾಜು ಅವರ ಮಾರ್ಗದರ್ಶನದಲ್ಲಿ ನಡೆಸಿದ್ದೇನೆ. ಕಾರ್ಯಕರ್ತರಲ್ಲಿ ಮೂಡಿರುವ ಗೊಂದಲಕ್ಕೆ ತೆರೆ ಬೀಳಲಿದೆ. ನಂತರ ಪಕ್ಷ ಪ್ರಚಾರ ನಡೆಸಿ ಎಂದು ಕರೆ ನೀಡಿದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.