ಮಧುಗಿರಿ : ನಿಶ್ಚಿತ ಠೇವಣಿ ಯೋಜನೆ ಬದಲಾವಣೆ ಸರ್ಕಾರಿ ನೌಕರರ ವರ್ಗಕ್ಕೆ ಮಾರಕವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಎನ್ ಪಿ ಎಸ್ ನೌಕರರ ಬೇಡಿಕೆಗಳನ್ನು ಸೇರಿಸಲು ಪ್ರಯತ್ನಿಸಲಾಗುವುದೆಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಭರವಸೆ ನೀಡಿದರು.
ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಮಾವೇಶಕ್ಕೆ ತೆರಳುತ್ತಿದ್ದ ನೌಕರರನ್ನು ಪಟ್ಟಣದ ರಾಜೀವ್ ಗಾಂಧೀ ಕ್ರೀಡಾಂಗಣದಲ್ಲಿ ಬೇಟಿ ಮಾಡಿ ಮಾತನಾಡಿದ ಅವರು ನೌಕರರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ನಿಮ್ಮ ನ್ಯಾಯಯುತ ಬೇಡಿಕೆಗೆ ಒಗ್ಗಟು ಮುಖ್ಯ. ನಿಮ್ಮ ಬೇಡಿಕೆಗೆ ನಮ್ಮ ಸಹಕಾರವಿದೆ. ನಿಮ್ಮ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಲು ಬದ್ದ ಎಂದರು.
ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ಮಹಾಲಿಂಗೇಶ್ ಮಾತನಾಡಿ ಎನ್ ಪಿ ಎಸ್ ನೌಕರರಿಗೆ ಇದು ಕರಾಳ ದಿನವಾಗಿದ್ದು, ನೌಕರರಿಗೆ ಪಿಂಚಣಿ ಇಲ್ಲದಿದ್ದರೆ ವೃದ್ದಾಶ್ರಮ ಸೇರುವ ಪರಿಸ್ಥಿತಿ ಬರುತ್ತದೆ. ಮುಂದಿನ ದಿನಗಳಲ್ಲಿ ದೆಹಲಿ ಚಲೋ ಹೋರಾಟ ಮಾಡಬೇಕೆಂದು ತಿಳಿಸಿ ಈ ನೌಕರರ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಕೆ ಎನ್ ರಾಜಣ್ಣ ರವರಲ್ಲಿ ಒತ್ತಾಯಿಸಿದರು.
ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿ ಎನ್ಪಿಎಸ್ ನೌಕರರ ಮರಣ ಶಾಸನವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 33 ಇಲಾಖೆಗಳ 5 ಲಕ್ಷಕ್ಕೂ ಹೆಚ್ಚು ಮಂದಿ ನೌಕರರು ಪ್ರತಿಭಟನಾ ಸಮಾವೇಶದಲ್ಲಿ ಸೇರಲಿದ್ದಾರೆ ಇದು ನಮಗೆ ಭಿಕ್ಷೆಯಲ್ಲ ನಮ್ಮ ಸಂವಿಧಾನದ ಹಕ್ಕು. ನಮ್ಮ ಹಕ್ಕನ್ನು ನಮಗೆ ನೀಡಿ ಎಂದು ಒತ್ತಾಯಿಸಿದ ಅವರು ಎನ್.ಪಿ.ಎಸ್ ಹೋರಾಟ ವೆಂದರೆ ಸರ್ಕಾರಿ ನೌಕರರ ಹೋರಾಟ ಎಂದೇ ಅರ್ಥ. ಅಂತಹ ಹೋರಾಟಕ್ಕೆ ಬೆಂಬಲ ಸೂಚಿಸಿದ ಕೆ.ಎನ್.ರಾಜಣ್ಣನವರಿಗೆ ರಾಜ್ಯದ ನೌಕರರ ಪರವಾಗಿ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎನ್.ಪಿ.ಎಸ್ ನೌಕರರ ಗೌರವಾಧ್ಯಕ್ಷ ಡಾಕ್ಟರ್ ನವೀನ್, ಪ್ರಧಾನ ಕಾರ್ಯದರ್ಶಿ ಸುಬ್ಬರಾಯ, ಖಜಾಂಚಿ ಪ್ರೇಮ್ ಕುಮಾರ್, ಉಪಾಧ್ಯಕ್ಷರುಗಳಾದ ಉಮೇಶ್ ಗೌಡ, ಹರೀಶ್, ನೇತ್ರಾವತಿ ಸಂಧ್ಯಾ ರಾಣಿ ಲತಾಮಣಿ ಮತ್ತು ನೌಕರರು ಹಾಜರಿದ್ದರು. ಪ್ರಾರ್ಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸಂಜಯ್ ಪುರಸಭಾ ಮಾಜಿ ಅಧ್ಯಕ್ಷ ಎನ್ ಗಂಗಣ್ಣ ಮುಖಂಡರುಗಳಾದ ಎಂಎಸ್ ಶಂಕರ್ ನಾರಾಯಣ ಹಾಜರಿದ್ದರು