ಪಾವಗಡ: ತಾಲ್ಲೂಕಿನ ದಲಿತ ಸಂಘಟನೆಗಳ ಒಕ್ಕೂಟ, ಮಾದಿಗ, ಛಲವಾದಿ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೋಮವಾರ ಎ.ಜೆ.ಸದಾಶಿವ ಆಯೋಗ ವರದಿಯ ಒಳಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ನಿರೀಕ್ಷಣಾ ಮಂದಿರದಿಂದ ಶನೈಶ್ಚರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಹಶೀಲ್ದಾರ್ ಕಚೇರಿ ಮುಂಭಾಗ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಲಾಯಿತು.
ದಲಿಪರ ಚಿಂತಕ, ಉಪನ್ಯಾಸಕ ಕೊಟ್ಟ ಶಂಕರ್ ಮಾತನಾಡಿ, ಮೀಸಲಾತಿ ಸಮಾಜಿಕ ನ್ಯಾಯ ಒಳಮೀಸಲಾತಿ ಸಾಮಾಜಿಕ ನ್ಯಾಯದ ವಿಸ್ತರಣೆ. ಮೂರು ದಶಕದ ಚಳವಳಿಯನ್ನ ಮೂರು ಪಕ್ಷಗಳು ಅಪಮಾನಿಸಿದ್ದು ಅಸ್ಪೃಶ್ಯರಿಗೆ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗಬೇಕಾದರೆ ಒಳ ಮೀಸಲಾತಿ ಜಾರಿಯಾಗಲೇಬೇಕು ಎಂದು ಒತ್ತಾಯಿಸಿದರು.
ಒಳ ಮೀಸಲಾತಿಯನ್ನ ವಿರೋಧಿಸುವವರು ಕಪೋಲ ಕಲ್ಪಿತ ಸುದ್ದಿಗಳನ್ನ ಅಮಾಯಕ ಜನರಿಗೆ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳತ್ತಿರುವುದು ದುರಂತ. ಒಳ ಮೀಸಲಾತಿಯ ವಿರೋಧ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಇದಕ್ಕೆ ಹೊಲೆಯ- ಮಾದಿಗರ ಐಕ್ಯತೆಯೇ ಮದ್ದು ಎಂದರು.
ಕೊರಚ, ಲಂಬಾಣಿ, ಭೋವಿ ಜಾತಿಗಳ ಜೊತೆ ಒಳಮೀಸಲಾತಿಗಾಗಿ ಸಂಘರ್ಷಕ್ಕೆ ಇಳಿದಿಲ್ಲ, ಅಣ್ಣ ತಮ್ಮಂದಿರಾದ ನಾವು ನಮ್ಮ ಪಾಲು ಕೇಳುತ್ತಿದ್ದೇವೆ. ಹೀಗಾಗಿ ನಮ್ಮ ಪಾಲಿಗೆ ಅಡ್ಡಿಬರಬಾರದೆಂದು ಪ್ರೀತಿಯಿಂದ ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.
ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ವರದರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ದಲಿತ ಮುಖಂಡರಾದ ವಕೀಲರ ಸಂಘದ ಅಧ್ಯಕ್ಷ ಶೇಷಾನಂದನ್, ಡಿ.ಜೆ ಎಸ್ ನಾರಾಯಣಪ್ಪ, ಪಳವಳ್ಳಿ ಸುಬ್ಬರಾಜು, ಸಿ.ಕೆ.ತಿಪ್ಪೇಸ್ವಾಮಿ, ಪೆದ್ದಣ್ಣ, ತಮಟೆ ಸುಬ್ಬರಾಯಪ್ಪ, ಟಿ.ಎನ್.ಪೇಟೆ ರಮೇಶ್, ಮೀನಕುಂಟನಹಳ್ಳಿ ನರಸಿಂಹಪ್ಪ, ಕಡಪಲಕೆರೆ ಹನುಮಂತರಾಯಪ್ಪ, ರವೀಂದ್ರ, ಮಂಜುನಾಥ್, ಕೆ.ಪಿ.ಲಿಂಗಣ್ಣ, ಮಂಗಳವಾಡ ಮಂಜಣ್ಣ, ಮೊದಲೇಟಿ, ಮಧು, ಉಪನ್ಯಾಸಕ ಮಂಜುನಾಥ್, ನಾರಾಯಣಪ್ಪ ಉಪಸ್ಥಿತರಿದ್ದರು.