ಗುಬ್ಬಿ: ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾರರು ಸಾರ್ವಭೌಮರು. ಅಧಿಕಾರ ಕೊಡುವುದು, ಕಿತ್ತು ಕೊಳ್ಳುವುದು ಎರಡೂ ಜನರ ಕೈಯಲ್ಲಿದೆ. ಜನರ ಒಡನಾಟ ಇರುವವರು ಜನ ಒಪ್ಪುತ್ತಾರೆ ಯಾರೋ ಬಂದು ಬದಲಿಸುವುದು ಚಟಕ್ಕೆ ಆಡುವ ಮಾತು ಅಷ್ಟೇ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಕೊಡಗೀಹಳ್ಳಿ ದೊಡ್ಡ ಕೆರೆ ಮತ್ತು ಗಳಗ ವಡ್ಡರಹಟ್ಟಿ ಕೆರೆ ಕೋಡಿ ಮತ್ತು ಏರಿ ಅಭಿವೃದ್ದಿಯ ಒಟ್ಟು ಒಂದು ಕೋಟಿ ರೂಗಳ ಸಣ್ಣ ನೀರಾವರಿ ಇಲಾಖೆಯ ಎರಡು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಕ್ಷೇತ್ರ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ಯಾರು ಬೇಕಾದರೂ ಕ್ಷೇತ್ರಕ್ಕೆ ಬರಬಹುದು. ಇಲ್ಲಿಗೆ ಸ್ಟೇ ತಂದಿಲ್ಲ. ಮಾತು ಆಡಬಹುದು. ನಾನು ಪ್ರಧಾನಿ ಮೋದಿ ಅವರನ್ನು ಸೋಲಿಸುವೆ ಎಂದು ಹೇಳಬಹುದು. ಆದರೆ ವಾಸ್ತವದಲ್ಲಿ ಸಾಧ್ಯವೇ. ಹಾಗೆಯೇ ಜನರೇ ಅಂತಿಮ ನಿರ್ಧಾರ. ಸಂಪರ್ಕ ಇರುವವರು ಉಳಿಯುತ್ತಾರೆ ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದರು.

ರಾಜೀನಾಮೆ ಬಜೆಟ್ ಅಧಿವೇಶನ ನಂತರ ನೀಡುತ್ತೇನೆ. ಹಲವು ಶಾಸಕರು ಪಕ್ಷ ತೊರೆಯುತ್ತಾರೆ. ಎಲ್ಲರೂ ಸಾಮಾನ್ಯವಾಗಿ ನೀತಿ ಸಂಹಿತೆ ಜಾರಿ ಬಳಿಕ ರಾಜೀನಾಮೆ ನೀಡುವರು. ನಾನು ರಾಜೀನಾಮೆ ನಂತರ ಕಾರ್ಯಕರ್ತರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದ ಅವರು ಬೇಸರ ಹೊಂದಿರುವವರು ಹೊರ ಬರುತ್ತಾರೆ. ಯಾವ ಪಕ್ಷಕ್ಕೆ ಹೋಗುತ್ತಾರೆ ನನಗೆ ತಿಳಿಯದು. ಶಿವಲಿಂಗೇಗೌಡ, ದತ್ತ ಇನ್ನೂ ಕೆಲವರು ಯತ್ತ ಸಾಗುತ್ತಾರೆ ತಿಳಿಯದು ಎಂದರು.
ಎರಡು ವರ್ಷ ಸುರಿದ ಬಾರಿ ಮಳೆ ರಸ್ತೆಯನ್ನು ಹಾಳು ಮಾಡಿದೆ. ಮರಳಿ ಅಂತಹ ರಸ್ತೆಗೆ ಮತ್ತೊಮ್ಮೆ ಅನುದಾನ ಹಾಕಲಾಗುತ್ತಿದೆ. ಈ ಜೊತೆಗೆ ಕೆರೆಗಳ ಏರಿ ಮತ್ತು ಕೋಡಿ ಉಳಿಸುವ ಕೆಲಸಕ್ಕೂ ಒತ್ತು ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ಹಲವು ಕೆರೆಗಳ ಅಭಿವೃದ್ದಿ ಸಹ ಮಾಡಲಾಗುವುದು ಎಂದ ಅವರು 1.20 ಕೋಟಿ ರೂಗಳಲ್ಲಿ ಕೆರೆಗಳ ಕೆಲಸಕ್ಕೆ ಚಾಲನೆ ನೀಡಿದ್ದು, ಮತ್ತಿಕೆರೆ ಹಾಗಲವಾಡಿ ಸಂಪರ್ಕಿಸುವ ರಸ್ತೆ 4 ಕೋಟಿಯಲ್ಲಿ ನಡೆದಿದ್ದು, ಒಂದು ಭಾಗದ ಕೆಲಸ ತಾಂತ್ರಿಕ ಸಮಸ್ಯೆಯಲ್ಲಿ ನಿಂತಿತ್ತು. ಬಾಕಿ ಕೆಲಸಕ್ಕೆ 75 ಲಕ್ಷ ನೀಡಿ ಪೂಜೆ ಮಾಡಲಾಗುತ್ತಿದೆ. ಹಳಸಿನಕೆರೆ ಪೂಜೆ, ಅಳಿಲುಘಟ್ಟ ರಸ್ತೆಗೆ 2.5 ಕೋಟಿ ಅನುದಾನ ನೀಡಿ ಅದಕ್ಕೂ ಚಾಲನೆ ನೀಡಲಾಗುವುದು ಎಂದು ಅಭಿವೃದ್ದಿ ಕೆಲಸದ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಪಾಂಡುರಂಗಯ್ಯ, ಗಿರೀಶ್, ದಿವಾಕರ್, ಪ್ರತಾಪ್, ಅಶ್ವತ್ಥ್, ತಿಮ್ಮೇಗೌಡ, ಸಣ್ಣ ನೀರಾವರಿ ಇಲಾಖೆ ಎಇ ವಿನಯ್, ಗುತ್ತಿಗೆದಾರರಾದ ರೇಣುಕಯ್ಯ, ಶ್ರೀನಿವಾಸ್ ಇತರರು ಇದ್ದರು.
ವರದಿ: ಹರಿಪ್ರಿಯ ರಮೇಶ್ ಗೌಡ, ಗುಬ್ಬಿ.