ತುಮಕೂರು: ಮಹತ್ವದ ಬೆಳವಣಿಗೆಯಲ್ಲಿ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕಗೊಂಡಿದ್ದು, ನೆಲಮಂಗಲ ತಾಲ್ಲೂಕು ಮೈಲನಹಳ್ಳಿ ಗ್ರಾಮದ ವಟು ಮನೋಜ್ಕುಮಾರ್ ಕಿರಿಯ ಶ್ರೀಗಳಾಗಿ ನಿಯೋಜಿತರಾಗಿದ್ದಾರೆ.
ಇದೇ ಏ.23ರ ಬಸವಜಯಂತಿ ಅಕ್ಷಯ ತೃತೀಯದ ಶುಭದಿನದಂದು ನಿರಂಜನ ಪಟ್ಟಾಧಿಕಾರ ಹಾಗೂ ಉತ್ತರಾಧಿಕಾರ ಧೀಕ್ಷೆಯನ್ನು ಸಿದ್ಧಗಂಗಾ ಮಠದಲ್ಲಿ ನೀಡಲಾಗುತ್ತಿದ್ದು, 36 ವರ್ಷದ ಮನೋಜ್ಕುಮಾರ್ ಅವರೊಂದಿಗೆ? ಸಿದ್ಧಗಂಗಾ ಮಠದ ಪರಂಪರೆಯ ಮಠಗಳಾದ ಮಾಗಡಿಯ ಕಂಚುಗಲ್ ಬಂಡೆಮಠ ಹಾಗೂ ಬಸವಕಲ್ಯಾಣಮಠಕ್ಕೆ ಉತ್ತರಾಧಿಕಾರಿಗಳಾಗಿ ನಿಯೋಜನೆಗೊಂಡಿರುವ್ಕ ವಟುಗಳಾದ ಕೆ.ಎಂ.ಹರ್ಷ ಹಾಗೂ ಗೌರೀಶ್ಕುಮಾರ್ ಅವರಿಗೂ ನಿರಂಜನ ಪಟ್ಟಾಧಿಕಾರ ವಹಿಸಲಾಗುತ್ತಿದೆ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರಾಧಿಕಾರಿಗಳ ಕುರಿತು
ಮೈಲನಹಳ್ಳಿಯ ಶರಣ ದಂಪತಿಗಳಾದ ಎಂ.ಬಿ.ಷಡಕ್ಷರಯ್ಯ, ಹಾಗೂ ವಿರೂಪಾಕ್ಷಮ್ಮ ದಂಪತಿ ಸುಪುತ್ರರಾದ ಮನೋಜ್ಕುಮಾರ್ ಅವರು ಬಿಎಸ್ಸಿ, ಬಿಇಡಿ, ಎಂಎಸ್ಸಿ, ಎಂಎ ಹಾಗೂ ವಿದ್ವತ್ ಪದವೀಧರರಾಗಿದ್ದಾರೆ. ಪ್ರಸ್ತುತ ಸಿದ್ಧಗಂಗಾ ಪಾಲೆಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.