ಗುಬ್ಬಿ: ಅಲ್ಪ ಸಂಖ್ಯಾತರ ಪ್ರಮುಖ ಮುಖಂಡ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತಯಾಚನೆ ಏಪ್ರಿಲ್ 29 ರಂದು ಬೆಳಿಗ್ಗೆ ಆಗಮಿಸಲಿದ್ದಾರೆ ಎಂದು ಪಪಂ ಸದಸ್ಯ ಮಹಮದ್ ಸಾದಿಕ್ ತಿಳಿಸಿದರು.
ಪಟ್ಟಣದ ವಿನಾಯಕನಗರ ಬಡಾವಣೆಯ ವಾಸಣ್ಣ ಅಭಿಮಾನಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅಲ್ಪ ಸಂಖ್ಯಾತರ ಸಂಖ್ಯೆ ಹೆಚ್ಚಿರುವ ಗ್ರಾಮಗಳಿರುವ ಕುನ್ನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ಪರ ಮತಯಾಚನೆ ಮಾಡಲಿದ್ದು, ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಸಾವಿರಾರು ಕಾರ್ಯಕರ್ತರ ಬೈಕ್ ಮೆರವಣಿಗೆ ಮೂಲಕ ಕುನ್ನಾಲ ಪಂಚಾಯಿತಿಯತ್ತ ಸಾಗಲಿದ್ದಾರೆ ಎಂದು ತಿಳಿಸಿದರು.
ರಬ್ಬರ್ ಸ್ಟ್ಯಾಂಪ್ ರೀತಿ ಆಗಿರುವ ಸಿ.ಎಂ.ಇಬ್ರಾಹಿಂ ಸಾಹೇಬ್ರು ಯಾರೊಬ್ಬರಿಗೂ ಟಿಕೆಟ್ ಕೊಡುವ ಶಕ್ತಿ ಇಲ್ಲ. ಕಾಂಗ್ರೆಸ್ ತೊರೆದ ಬಳಿಕ ವರ್ಚಸ್ಸು ಕಳೆದುಕೊಂಡು ಕೇವಲ ಭಾಷಣ ಮಾಡಲು ಅಷ್ಟೇ ಸೀಮಿತವಾಗಿದ್ದಾರೆ. ಈಗಾಗಲೇ ಮುಸ್ಲಿಂ ಭಾಂದವರನ್ನು ಓಲೈಸುವ ಪ್ರಯತ್ನ ಮಾಡಿ ಸೋತಿದ್ದಾರೆ. ಇತ್ತೀಚಿಗೆ ಕುನ್ನಾಲ ಗ್ರಾಮದಲ್ಲಿ ಬಂದು ಕೇವಲ ಪೊಳ್ಕು ಆಶ್ವಾಸನೆ ನೀಡಿ ಹೋದರು. ಈ ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮತಗಳಿರುವ ಮುಸ್ಲಿಂ ಸಮಾಜ ಇಂದಿಗೂ ಮಾಜಿ ಸಚಿವ ಶ್ರೀನಿವಾಸ್ ಪರ ಇದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಮತಗಳು ನೀಡಿ ಶ್ರೀನಿವಾಸ್ ಅವರನ್ನು ಐದನೇ ಬಾರಿ ಶಾಸಕರಾಗಿ ಗೆಲ್ಲಿಸುತ್ತಾರೆ ಎಂದರು.
ಮುಸ್ಲಿಂ ಸಮಾಜದ ಎಲ್ಲಾ ಮುಖಂಡರು ಕಾಂಗ್ರೆಸ್ ಪರ ನಿಂತಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಕೂಡಾ ಸೇರಲಿದ್ದಾರೆ. ನಮ್ಮಲ್ಲಿ ಈ ಹಿಂದೆ ಇದ್ದ ಭಿನ್ನಾಭಿಪ್ರಾಯ ಮಾಯವಾಗಿದೆ. ಎಲ್ಲರೂ ಒಗ್ಗೂಡಿ ವಾಸಣ್ಣ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದ ಅವರು ಜಮೀರ್ ಅಹಮ್ಮದ್ ಖಾನ್ ಅವರ ಆಗಮನ ನಮ್ಮಲ್ಲಿ ಮತ್ತಷ್ಟು ಬಲ ಬರಲಿದೆ. ಮುಸ್ಲಿಂ ಹೊರತಾಗಿ ಬೇರೆ ಧರ್ಮ ಜಾತಿ ಜನರು ಅಭಿಮಾನಿಗಳಿದ್ದಾರೆ. ಅವರದ್ದೇ ಅಭಿಮಾನಿಗಳು ಗುಬ್ಬಿ ತಾಲ್ಲೂಕಿನಲ್ಲಿದ್ದಾರೆ. ಈ ಹಿಂದೆ ನೆರೆ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದರು. ಇಂದಿಗೂ ಅವರ ಬಗ್ಗೆ ಇರುವ ಅಭಿಮಾನ ಮತಗಳಾಗಳಿವೆ ಎಂದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ರೆಹಮತ್ ವುಲ್ಲಾ, ಮುಖಂಡರಾದ ಶಫಿ ಅಹಮದ್, ಡಾ. ನಭಿಖಾನ್, ಇರ್ಫಾನ್, ವಾಜಿದ್ ಖಾನ್, ಫಯಾಜ್ ಖಾನ್, ಅಲಿಯಾ, ಸಮೀರ್, ನೂರುಲ್ಲಾ ಇತರರು ಇದ್ದರು.