ಗುಬ್ಬಿ: ಒತ್ತಡದ ಬದುಕಿನಲ್ಲಿ ಹೈರಾಣಾದ ಮನು ಕುಲಕ್ಕೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಇದೇ ತಿಂಗಳ 22 ರಿಂದ ಜೂನ್ 5 ರವರೆಗೆ ಪ್ರವಚನ ಮಾಲೆಯನ್ನು ರಾಜಯೋಗಿನಿ ಬಿ.ಕೆ.ಶಿವಮಣಿ ಅಕ್ಕನವರು ನಡೆಸಿಕೊಡಲಿದ್ದಾರೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗುಬ್ಬಿ ಘಟಕದ ಸಂಚಾಲಕರಾದ ಶೋಭಾ ತಿಳಿಸಿದರು.
ಪಟ್ಟಣದ ಬೆಲ್ಲದಪೇಟೆ ಬಡಾವಣೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಘಟಕದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅನಾರೋಗ್ಯ ಪೀಡಿತವಾಗಿ ಮಾರ್ಪಾಡುಗೊಂಡ ಸಮಾಜದಲ್ಲಿ ಬದುಕುವ ಕಲೆ ರೂಢಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ 6.30 ರಿಂದ 7.30 ರವರೆಗೆ ನಿತ್ಯ ಪ್ರವಚನ ಮಾಡಲಿದ್ದಾರೆ ಎಂದರು.
ಮನಸ್ಸಿಗೆ ನೆಮ್ಮದಿ ಶಾಂತಿ ಕಾಣಲು ಅವಶ್ಯ ಮಾರ್ಗವನ್ನು ಸ್ವಾನುಭೂತಿ, ಶಿವನಾಭೂತಿ, ಶಿವಯೋಗ ಮೂಲಕ ಗಳಿಸುವ ಬಗ್ಗೆ ತಿಳಿಸಲಾಗುತ್ತದೆ. ಧಾರ್ಮಿಕ ಆಚರಣೆಯ ಜೊತೆಗೆ ಚಿಂತಾಮುಕ್ತ ಜೀವನ ಗಳಿಸಲು ಜಾಗೃತ ಮನಸ್ಸು, ಸಂಬಂಧ, ನಿರಂತರ ಸಂತೋಷ, ಕಾಲಚಕ್ರ ಹೀಗೆ ಅನೇಕ ವಿಚಾರ ತಿಳಿಯುವ ಅಗತ್ಯವಿದೆ. ನಿತ್ಯ ಒಂದು ತಾಸು ನಡೆಯುವ ಪ್ರವಚನ ಒತ್ತಡ ಬದುಕಿಗೆ ಮುಕ್ತಿ ನೀಡಿ ನೆಮ್ಮದಿ ಕರುಣಿಸಲಿದೆ. ಈ ಕಾರ್ಯಕ್ರಮಕ್ಕೆ ಗುಬ್ಬಿ ನಾಗರೀಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಿಳಿಸಿದ ಅವರು ಮೋಟಿವೇಶನಲ್ ಸ್ಪೀಕರ್ ಎಂದೇ ಗುರುತಿಸಿಕೊಂಡ ಶಿವಮಣಿ ಅಕ್ಕನವರ ಮಾತುಗಳನ್ನು ಕೇಳಲು ಆಗಮಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬಸವರಾಜು, ಸೋಮನಾಥ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಮಲ, ಸುಧಾ, ಕೃಷ್ಣಮೂರ್ತಿ, ಚಂದ್ರಕಲಾ, ಗಂಗಾಧರಪ್ಪ ಇತರರು ಇದ್ದರು.