ಗುಬ್ಬಿ: ಆಧುನಿಕತೆ ಬೆಳೆದಂತೆ ಮಾರಕ ರೋಗ ರುಜಿನಗಳು ತಾಂಡವವಾಡುತ್ತಿದೆ. ಉತ್ತಮ ಆರೋಗ್ಯ ಸಮಾಜಕ್ಕೆ ಧಾರ್ಮಿಕಾಚರಣೆ ಒಂದೇ ಉತ್ತಮ ಮಾರ್ಗ ಎಂದು ಶ್ರೀ ಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಕುಮಾರ್ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು ಹೋಬಳಿ ಬಡವನಪಾಳ್ಯ ಗ್ರಾಮದಲ್ಲಿನ ಶ್ರೀ ಗಣೇಶ ದೇವಸ್ಥಾನಕ್ಕೆ ಎರಡು ಲಕ್ಷ ರೂಗಳ ದೇಣಿಗೆ ನೀಡಿ ಮಾತನಾಡಿದ ಅವರು ನೆಮ್ಮದಿ ನೀಡುವ ದೇವಾಲಯಗಳು ಪ್ರತಿ ಗ್ರಾಮದಲ್ಲಿ ಅವಶ್ಯವಿದೆ. ಗ್ರಾಮೀಣ ಭಾಗದಲ್ಲಿ ದೇವಾಲಯಗಳು ರೈತರ ಕಷ್ಟ ಸುಖಗಳ ಒಂದು ಭಾಗವಾಗಿದೆ ಎಂದರು.
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ದೇವಾಲಯ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಲಾಗುತ್ತಿದೆ. ಬಾಲಾಜಿ ಸೇವಾ ಟ್ರಸ್ಟ್ ಮೂಲಕ ಈಗಾಗಲೇ ಸಾಮಾಜಿಕ ಕಾರ್ಯ ಹಾಗೂ ಧಾರ್ಮಿಕ ಕಾರ್ಯಗಳು ನಡೆಸಲಾಗಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಶುದ್ದ ಕುಡಿಯುವ ನೀರಿನ ಘಟಕ ನೀಡುವ ಮೂಲಕ ಸೇವಾ ಕಾರ್ಯ ಆರಂಭಿಸಿ ಬಡ ಜನರ ಆರೋಗ್ಯಕ್ಕಾಗಿ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಆರೋಗ್ಯ ಶಿಬಿರಗಳನ್ನು ನಡೆಸಲಾಗಿತ್ತು ಎಂದರು.
ಟ್ರಸ್ಟ್ ಸೇವೆಯನ್ನು ಗುಬ್ಬಿ ತಾಲ್ಲೂಕಿನೆಲ್ಲಡೆ ನಡೆಸಲಾಗಿದೆ. ಮನೆಗಳ ನಿರ್ಮಿಸುವ ಬಡ ಕುಟುಂಬಕ್ಕೆ ಸಿಮೆಂಟ್, ಶೀಟುಗಳನ್ನು ನೀಡುವ ಜೊತೆಗೆ ಧಾರ್ಮಿಕ ಚಟುವಟಿಕೆಗೆ ಸಹಾಯ, ದೇವಾಲಯಗಳ ಜೀರ್ಣೋದ್ದಾರಕ್ಕೂ ಆರ್ಥಿಕ ನೆರವು ನೀಡಲಾಗಿದೆ. ಎಂ.ಎನ್.ಕೋಟೆ, ನಿಟ್ಟೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ದೇವಾಲಯ ನಿರ್ಮಾಣಕ್ಕೆ ಹಣ ನೀಡಿ ಸಹಕಾರ ನೀಡಲಾಗಿದೆ ಎಂದ ಅವರು ಟ್ರಸ್ಟ್ ಕಾರ್ಯವನ್ನು ನಿರಂತರವಾಗಿ ನಡೆಸಲು ದುಡಿಮೆಯ ಒಂದಂಶವನ್ನು ಮೀಸಲಿಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಿದ ಡಾ.ಕೆ.ಕುಮಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಕರಿಬಸಮ್ಮ ಸಿದ್ದಲಿಂಗಯ್ಯ, ಸದಸ್ಯ ವಿಶ್ವನಾಥ್, ಮುಖಂಡರಾದ ಬಂಡಿಹಳ್ಳಿ ದೇವರಾಜ್, ಕುಮಾರ್ ಸೇರಿದಂತೆ ದೇವಾಲಯ ಸಮಿತಿ ಸದಸ್ಯರು, ಗ್ರಾಮಸ್ಥರು ಇದ್ದರು.