ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
ನಾಗಲಮಡಿಕೆ ಗ್ರಾಮದಲ್ಲಿ ನಡೆಯಿತು.
ಪಾವಗಡ: ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸುವಂತ ಕಾರ್ಯಕ್ರಮವಿದು ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಿ ಹಾಗೆಯೇ ಅಧಿಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಿ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ತಾಲ್ಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲ್ಲೂಕು ಆಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದೆ ಕಡೆ ಸಿಗುವಂತ ಕಾರ್ಯಕ್ರಮವಿದು. ಇದರಿಂದ ಜನರ ಸಮಸ್ಯೆಗಳಿಗೆ ಪರಿಹಾರ
ಕಲ್ಪಿಸಲಾಗುತ್ತದೆ.ಹಾಗಾಗಿ ತೊಂದರೆಗಳಿದ್ದರೆ ಕೂಡಲೇ ಮನವಿ ಸಲ್ಲಿಸಿ ಪರಿಹಾರೋಪಾಯ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾತನಾಡಿ ಸರ್ಕಾರದ ಆದೇಶದ ಒಂದು ವಿನೂತನ ಕಾರ್ಯಕ್ರಮವಿದು. ಯಾರಿಗೆ ತಾಲ್ಲೂಕು ಆಡಳಿತ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲವೋ ಅಂತಹವರೆಲ್ಲರಿಗೂ ಅನುಕೂಲ ಕಲ್ಪಿಸುವ ಸದುದ್ದೇಶದ ಕಾರ್ಯಕ್ರಮವಾಗಿದೆ. ಏಕ ಕಾಲಕ್ಕೆ ಕೃಷಿ ಇಲಾಖೆ, ಅರಣ್ಯ ಇಲಾಖೆ,ಬಿ.ಸಿ.ಎಂ.ಪಶು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹೀಗೆ ಎಲ್ಲಾ ಇಲಾಖಾಧಿಕಾರಿಗಳು ಸಿಕ್ಕುತ್ತಾರೆ.ಇಂತಹ ಸಂದರ್ಭವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು. ತಮ್ಮ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅರ್ಜಿ ನೀಡಿ, ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಾರೆ ಎಂದರು.
ತಹಶೀಲ್ದಾರ್ ವರದರಾಜು ಅವರು ಮಾತನಾಡಿ ತಿಂಗಳ ಎರಡನೇ ಶನಿವಾರ ನಡೆಯುವ ಈ ಕಾರ್ಯಕ್ರಮವಾಗಿದೆ.ನಮ್ಮ ಕಂದಾಯ ಇಲಾಖೆಯಡಿಯಲ್ಲಿ ಈಗಾಗಲೇ ನಾಗಲಮಡಿಕೆ ಹೋಬಳಿ ವ್ಯಾಪ್ತಿಯಲ್ಲಿ ಪಿಂಚಣಿ ಸೇರಿದಂತೆ ಹಲವು ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಲಾಗುತ್ತಿದೆ.ಒಂದು ವೇಳೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಬರುತ್ತಿಲ್ಲ ಎಂದರೆ ಕೂಡಲೇ 72 ಗಂಟೆಯೊಳಗೆ ಗ್ರಾಮಲೆಕ್ಕಾಧಿಕಾರಿ ಸ್ಥಳಕ್ಕೆ ಧಾವಿಸಿ ಅನುಕೂಲ ಕಲ್ಪಿಸುತ್ತಿದ್ದಾರೆ. ಅದನ್ನ ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನರು ತಮ್ಮ ಗ್ರಾಮಗಳ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.
ಈ ವೇಳೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ತಿರುಪತಯ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಮ್ಮ ಪಿಡಬ್ಲ್ಯೂಡಿ ಅನಿಲ್ ಕುಮಾರ್, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ, ಕೆಇಬಿ ಎ.ಇ.ಇ ಕೃಷ್ಣಮೂರ್ತಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಮೂರ್ತಿ,ಅಬಕಾರಿ ಇನ್ಸ್ಪೆಕ್ಟರ್ ಶಂಕರ್, ಸಮಾಜ ಕಲ್ಯಾಣಾಧಿಕಾರಿ ಹಟ್ಟಪ್ಪ, ಪರಿಶಿಷ್ಟ ಕಲ್ಯಾಣಾಧಿಕಾರಿ ಸಿದ್ದರಾಜು, ಶಿರಸ್ತೆದಾರ ನರಸಿಂಹಮೂರ್ತಿ, ಆರ್.ಐ. ಸುದರ್ಶನ್ ,ರೈತ ಮುಖಂಡರಾದ ನರಸಿಂಹರೆಡ್ಡಿ,ಕೃಷ್ಣರಾವ್ ಮುಂತಾದವರು ಇದ್ದರು,