ಗುಬ್ಬಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆ ರಾತ್ರಿ ನಡೆದ ಪಂಜಿನ ಮೆರವಣಿಗೆ ಮೂರು ದಿನದ ಕಾರ್ಯಕ್ರಮಕ್ಕೆ ಕಳೆ ಕಟ್ಟಿಕೊಟ್ಟಿತು. ಪಟ್ಟಣ ಪಂಚಾಯಿತಿ ಆಯೋಜಿಸಿದ್ದ ಈ ಮೆರವಣಿಗೆಯಲ್ಲಿ ಸಾರ್ವಜನಿಕರು, ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡ ಈ ನೂರಾರು ಜನರ ಪಂಜಿನ ಮೆರವಣಿಗೆಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.
ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಸಂಜೆ ಆರಂಭವಾದ ಪಂಜಿನ ಮೆರವಣಿಗೆ ಹೆದ್ದಾರಿಯಲ್ಲಿ ಸಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ತಲುಪಿತು. ವಿವಿಧ ಕಲಾ ತಂಡದೊಂದಿಗೆ ಹೆಜ್ಜೆ ಹಾಕಿದ ಜನರು ರಾಷ್ಟ್ರ ಧ್ವಜ ಹಾಗೂ ಪಂಜು ಹಿಡಿದು ಘೋಷಣೆ ಕೂಗುತ್ತಾ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಆಗಮಿಸಿದ ಪಂಜಿನ ಮೆರವಣಿಯ ವಾದ್ಯಗೋಷ್ಠಿ ತಂಡದವರು ನುಡಿಸಿದ ಮಹಾತ್ಮ ಗಾಂಧೀಜಿ ಅವರ ನೆಚ್ಚಿನ ರಘುಪತಿ ರಾಘವ ರಾಜ ರಾಮ್ ಹಾಡಿಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಮತ್ತು ಅಲ್ಲಿ ನೆರದಿದ್ದ ಮುಖಂಡರು ನೃತ್ಯ ಮಾಡಿ ಸಾರ್ವಜನಿಕರ ಗಮನ ಸೆಳೆದರು.

ಕಾರ್ಯಕ್ರಮ ಬಗ್ಗೆ ಮಾತನಾಡಿದ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, 75 ನೇ ವರ್ಷದ ಸವಿ ನೆನಪಿನ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆದು ಪ್ರತಿ ದಿನ ಒಂದೊಂದು ವಿಶೇಷತೆ ಅಳವಡಿಸಲಾಗಿದೆ. ಮೊದಲ ದಿನ ಎರಡು ಸಾವಿರ ಶಾಲಾ ಮಕ್ಕಳ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ಎರಡನೇ ದಿನ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು. ಈ ಜೊತೆಗೆ ಪಟ್ಟಣ ಪ್ರಮುಖ ರಸ್ತೆ ಸಿಂಗರಿಸಿದ್ದು, ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳನ್ನು ಬಿತ್ತರಿಸಿ ಜನರ ಗಮನ ಸೆಳೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬೆಟ್ಟಸ್ವಾಮಿ, ಚಂದ್ರಶೇಖರಬಾಬು, ದಿಲೀಪ್ ಕುಮಾರ್, ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ರೇಣುಕಾ ಪ್ರಸಾದ್, ಕುಮಾರ್, ರಂಗಸ್ವಾಮಿ, ಸಿದ್ದರಾಮಯ್ಯ, ಶೋಕತ್ ಆಲಿ, ಶ್ವೇತ, ಬಸವರಾಜು, ಪ್ರಕಾಶ್, ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.