ಮಧುಗಿರಿ: ಸಮಾಜದಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟಲು ನಾಗರಿಕರು ಸಹಕರಿಸಿ: ಡಿವೈಎಸ್ಪಿ ಕೆ. ಎಸ್. ವೆಂಕಟೇಶ್ ನಾಯ್ಡು

ಮಧುಗಿರಿ: ಸಮಾಜದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿತು ತಕ್ಷಣವೇ ದೂರುಗಳನ್ನು ನೀಡುವ ಮೂಲಕ ಪೊಲೀಸರಿಗೆ ಸಹಕರಿಸಬೇಕಾಗಿದೆ ಎಂದು ಮಧುಗಿರಿ ಡಿವೈಎಸ್ಪಿ ಕೆ. ಎಸ್. ವೆಂಕಟೇಶ್ ನಾಯ್ಡು ತಿಳಿಸಿದರು. 

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಗುರುವಾರದಂದು ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜನಸಂಪರ್ಕ ಸಭೆಯಲ್ಲಿ ನಾಗರಿಕರು ಬರಿ ದೂರುಗಳನ್ನು ಹೇಳುತ್ತಾ ಇದ್ದರೆ ಸಾಲದು ಘಟನೆ ನಡೆದ ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ನಿಶ್ಚಿತವಾಗಿ ಆಗಲಿ ಅಥವಾ ದೂರವಾಣಿ ಮೂಲಕ ದೂರು ಸಲ್ಲಿಸಿದರೆ ಅಕ್ರಮ  ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯ ಎಂದರು. 

ಐ ಡಿ ಹಳ್ಳಿ ಹೋಬಳಿಯ ವಿಠಲಾಪುರ ಮತ್ತು ಐ.ಡಿ.ಹಳ್ಳಿ ಗ್ರಾಮದಲ್ಲಿರುವ ಮದ್ಯದ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಅಲ್ಲಿನ ನಾಗರಿಕರು ಪೊಲೀಸರ ಗಮನ ಸೆಳೆದರು.  ಶಾಲಾ ಕಾಲೇಜು ಆವರಣಗಳಲ್ಲಿ ಕುಡಿದು ಗಲಾಟೆ ಮಾಡುವುದು ಐ.ಡಿ. ಹಳ್ಳಿ ಆಸ್ಪತ್ರೆಯಲ್ಲಿ ಪ್ರತಿ ದಿನ ಮಹಿಳಾ ಸಿಬ್ಬಂದಿಯ ಕಾರ್ಯ ನಿರ್ವಹಿಸುವುದರಿಂದ ಕುಡುಕರ ಹಾವಳಿ ಯಿಂದಾಗಿ ಸಾಕಷ್ಟು ತೊಂದರೆಗಳಾಗುತ್ತಿದೆ ಎಂದು ಸಭೆಯ ಗಮನ ಸೆಳೆಯಲಾಯಿತು. 

ಇತ್ತೀಚೆಗೆ ವಿಠಲಾಪುರ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಕುಡುಕರ ಹಾವಳಿ ಹೆಚ್ಚಾಗಿ ಅಲ್ಲಿನ ಶಿಕ್ಷಕಿಯರನ್ನೇ ನೃತ್ಯ ಮಾಡಲು ಗಲಾಟೆ ಮಾಡಿದಂತಹ ಸನ್ನಿವೇಶ ನಿರ್ಮಾಣವಾಗಿತ್ತು.   ಹರಳಾಪುರ ಮತ್ತು ಕೊಂಡವಾಡಿ ರಸ್ತೆಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು,  ರಾತ್ರಿ ವೇಳೆಯಲ್ಲಿ ಕಿರುಚಾಟ ಹೆಚ್ಚಾಗಿ ಗ್ರಾಮಸ್ಥರ ಶಾಂತಿಗೆ ಭಂಗವಾಗುತ್ತಿದೆ ಎಂದು ದೂರಲಾಯಿತು. 

ಆಂಧ್ರದ ಗಡಿ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಬೇಕು ಎಂದು ಬಹುತೇಕ  ನಾಗರಿಕರ ಆಗ್ರಹಿಸಿದರು ಆಗ ಮಾತನಾಡಿದ  ಪೋಲಿಸರು  ಈ ವಿಚಾರವಾಗಿ ಕ್ರಮ ಕೈಗೊಳ್ಳಲು ಅಬಕಾರಿ ಇಲಾಖೆಯವರಿಗೆ ಸೂಚಿಸಲಾಗುವುದು ಎಂದರು. 

ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಮಾತನಾಡಿ, ವಸತಿ ನಿಲಯಗಳಲ್ಲಿ ಆಹಾರದ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಪೋಲಿಸ್ ಸಭೆಯಲ್ಲಿ ಉತ್ತರ ನೀಡಬೇಕೆಂದು ಒತ್ತಾಯಿಸಿದಾಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಈ ಬಗ್ಗೆ ಪ್ರತಿನಿತ್ಯವೂ ಆಹಾರದ ಬಗ್ಗೆ ಮೊಬೈಲ್ ಮೂಲಕ ಅಪ್ ಲೋಡ್ ಆಗುತ್ತಿದೆ. ನಮಗೆ ಇಲ್ಲಿಯವರೆಗೆ ಸರಿಯಾದ ದೂರು ಬಂದಿಲ್ಲ.  ವಸತಿ ನಿಲಯದಲ್ಲಿ  ಆಹಾರ ವ್ಯತ್ಯಯವಾಗುತ್ತಿದೆಂದು ನಿರ್ಧಿಷ್ಟ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಣದೆ ರೋಗಿಗಳು ದಾಖಲಾದರೆ ಅವರಿಗಿರೋ ರೋಗದ ಜೊತೆಗೆ ಮತ್ತೊಂದು ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ, ವೈದ್ಯರನ್ನು ಸಂಪರ್ಕಿಸಲು ಚೀಟಿ ಪಡೆಯಲು ಸಾಕಷ್ಟು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿದೆ, ವಿಕಲಚೇತನರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ಆರೋಪಗಳು ಕೇಳಿ ಬಂದವು.  

ಇತ್ತೀಚೆಗೆ ಜಯಮಂಗಲಿ ನದಿಯ ಪ್ರದೇಶಗಳಲ್ಲಿ  ರಾತ್ರಿ ವೇಳೆ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಇದನ್ನು ತಡೆಗಟ್ಟುವಂತೆ ಅಲ್ಲಿನ ರೈತರು ಸಭೆ ಗಮನ ಸೆಳೆದರು. ಕೆಎಸ್ಆರ್ ಟಿಸಿ  ಬಸ್ಸುಗಳು ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸದ ಕಾರಣ ರೋಗಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದಕ್ಕೆ ಪೋಲಿಸರು ಅಡ್ಡಪಡಿಸುತ್ತಿದ್ದಾರೆ ಎಂದು ಕೆಎಸ್ ಆರ್ ಟಿಸಿ ಬಸ್ ಚಾಲಕರು ಹೇಳುತ್ತಿರುವುದರಿಂದ ಕೋರಿಕೆ ನಿಲುಗಡೆ ಮಾಡಲು ಅನುಮತಿ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. 

ಕಾಟಗನಹಟ್ಟಿ, ಹುಣಸೆ ಮರದಹಟ್ಟಿ ಭಾಗದಲ್ಲಿ  ಸುಮಾರು 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುತ್ತಿದ್ದು ಯಾವುದೇ ಬಸ್ಸುಗಳ ನಿಲುಗಡೆ ಮಾಡದ ಕಾರಣ ಖಾಸಗಿ ಆಟೋಗಳನ್ನು ಗಳಲ್ಲಿ ವಿದ್ಯಾರ್ಥಿಗಳು ಬರುವಂತಾಗಿದೆ. ಈ ಸಂದರ್ಭದಲ್ಲಿ ಮಾರ್ಗಮದ್ಯೆ  ಆಟೋಗಳಿಗೆ ಪೊಲೀಸರು ದಂಡ ವಿಧಿಸುತ್ತಿರುವುದರಿಂದ ಅವರೂ ಸಹ  ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದ ಕಾರಣ ನಡೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಖಾಸಗಿ ಬಸ್ಸು ಮತ್ತು ಕೆಎಸ್ಆರ್ಟಿಸಿ ಬಸ್ಸುಗಳನ್ನು ಶಾಲಾ ಸಮಯದಲ್ಲಿ ನಿಲ್ಲಿಸುವಂತೆ ಸೂಚಿಸಬೇಕೆಂದು ಗ್ರಾಪಂ ಮಾಜಿ ಸದಸ್ಯ ಗೌಡಮುದ್ದಯ್ಯ  ತಿಳಿಸಿದರು. 

ಪಟ್ಟಣದ ಎಸ್ ಎಂ ಕೃಷ್ಣ ಬಡಾವಣೆ ಮತ್ತು ಬೆಂಕಿಪುರಗಳಲ್ಲಿ ಸಮಾಜ ಘಾತುಕರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ, ಇದರಿಂದ ಅಶಾಂತಿ ಮೂಡುತ್ತಿದ್ದು,  ಈ ಬಗ್ಗೆ ಪೊಲೀಸರು ನಿರಂತರವಾಗಿ ಬಿಟ್ ಮಾಡಿ  ಅಂಥವರನ್ನು ಮಟ್ಟ ಹಾಕಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರೊಬ್ಬರು ದೂರಿದರು. 

ಇತ್ತೀಚೆಗೆ ವಿದ್ಯಾರ್ಥಿನಿಯರು ಹಾಸ್ಟೆಲ್ ಗೂ ಬಾರದೇ ಶಾಲೆಗೂ ಹೋಗದೇ ಎಲ್ಲೆಂದರಲ್ಲಿ ಹೋಗುತ್ತಿರುವುದರಿಂದ ಅಪರಾಧ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ಸಿಡಿಪಿಒ ಅನಿತಾ ಗಮನ ಸೆಳೆದರು. ಈ ಬಗ್ಗೆ ಮನೆಯಲ್ಲಿ ಪೋಷಕರು ತಮ್ಮ ಮಕ್ಕಳ ಕಾರ್ಯಚಟುವಟಿಕೆ ಬಗ್ಗೆ ಆಗಾಗ್ಗೆ ಗಮನಹರಿಸಿದರೆ ಒಳಿತು ಎಂದು ತಿಳಿಸಿದರು. ಕುಟುಂಬದಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಿರಬೇಕು ತಮ್ಮ ಮಕ್ಕಳನ್ನು ತಾವೇ ದಂಡಿಸಬೇಕು ಬೇರೆಯವರು ದಂಡಿಸುವುದು ಬೇಡ ಸಮಾಜದಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಸಾಕಷ್ಟು ಆಗುತ್ತಿದ್ದು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಪೋಷಕರೇ ಸಹಕರಿಸಬೇಕೆಂದರು. 

ಸಭೆಯಲ್ಲಿ ಸಿಪಿಐ ಎಂ. ಎಸ್. ಸರ್ದಾರ್,  ಬಡವನಹಳ್ಳಿ  ಪಿಐ ಹನುಮಂತರಾಯಪ್ಪ,  ಪಿಎಸ್ ಐಗಳಾದ ಕೆ.ಟಿ.ರಮೇಶ್, ಮಿಡಿಗೇಶಿ ಪಿಎಸ್ಐ ತಾರಾಸಿಂಗ್, ಕೊಡಿಗೇನಹಳ್ಳಿ ಪಿಎಸ್ ಐ ನಾಗರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ,  ಎಆರ್ ಟಿಒ ದೇವಿಕಾ  ಅಬಕಾರಿ ಇಲಾಖೆ ಸಬ್ ಇನ್ಸ್ ಪೆಕ್ಟರ್ ರಾಮಮೂರ್ತಿ ಮತ್ತು  ಮಧುಗಿರಿ ತಾಲ್ಲೂಕಿನ ನಾಗರಿಕರು ಪಾಲ್ಗೊಂಡಿದ್ದರು

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!