ಗುಬ್ಬಿ: ಬಗೆದಷ್ಟುಆಳವಾಗಿ ಬೇರೂರಿರುವ ಭೂ ಹಗರಣ ಈ ಹಿಂದೆ 1999 ರ ಅವಧಿಯಲ್ಲಿದ್ದ ತಹಶೀಲ್ದಾರ್ ಮಂಜೂರು ಮಾಡುವ ಅಧಿಕಾರವನ್ನು ಪ್ಲಸ್ ಮಾಡಿಕೊಂಡ ದಂಧೆ ಮಾಡಿದ್ದು ಸೂಕ್ಷ್ಮವಾಗಿ ಲೋಪವಾಗದಂತೆ ಅವಲೋಕಿಸಿ ತನಿಖೆ ನಡೆಸಲು ಸೂಚಿಸಿದ್ದೇನೆ. ಹಗರಣದಲ್ಲಿನ ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆ ಖಚಿತ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ವಿನಾಯಕನಗರ ಬಡಾವಣೆಯಲ್ಲಿ 77.50 ಲಕ್ಷ ರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಭೂ ಮಂಜೂರು ಕಮಿಟಿ ಇಲ್ಲದ 1999 ರಿಂದ 2001 ರವರೆಗಿನ ಮೂರು ವರ್ಷದ ಅವಧಿಯಲ್ಲಿ ತಹಶೀಲ್ದಾರ್ ಭೂಮಿ ನೀಡುವ ಅಧಿಕಾರವಿತ್ತು. ಈ ಅವಧಿಯ ಎಲ್ಲಾ ದಾಖಲೆ ತಿದ್ದಿ, ಬೇರೆಯವರ ಹೆಸರು ಸೇರಿಸಿ ಅವ್ಯವಹಾರ ಮಾಡಿದ್ದಾರೆ. ಬಗೆದಷ್ಟು ಆಳವಾಗಿರುವ ಹಗರಣದಲ್ಲಿ ಈಗಾಗಲೇ 400 ಕ್ಕೂ ಅಧಿಕ ಪ್ರಕರಣ ಬಯಲಿಗೆ ಬರುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಮನುಕುಲ ಉಳಿಯಲು ಶೇಕಡಾ 33 ರಷ್ಟು ಅರಣ್ಯ ಭೂಮಿ ಉಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ಹಿನ್ನಲೆ ಈ ಅರಣ್ಯ ಭೂಮಿ ಹುಡುಕಾಟ ಸಮಯದಲ್ಲಿ ಸರ್ವೇ ನಂಬರ್ ಜಮೀನು ಪಟ್ಟಿಗೆ ಸೇರಿವೆ. ಆದರೆ ಆರ್ ಟಿಸಿ ನಮೂದನೆಯಲ್ಲೂ ಗೊಂದಲ ಮೂಡಿ ರೈತರು ಪರದಾಡುವಂತಾಗಿದೆ. ಈ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಲು ತಿಳಿಸಲಾಗಿದೆ ಎಂದ ಅವರು ಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕು. ಆದರೆ ಅಧ್ಯಕ್ಷರಾದವರು ನನ್ನನ್ನು ಆಹ್ವಾನಿಸಿಲ್ಲ ಎಂದು ಹೇಳಿ ಮುಖ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಶೋಭೆಯಲ್ಲ. ಮನೆಯ ಕೆಲಸಕ್ಕೆ ಮನೆಯವರೇ ಕರೆದಿಲ್ಲ ಎಂದರೆ ಇದು ಹಾಸ್ಯಾಸ್ಪದ. ದೊಡ್ಡ ಕಿರೀಟದ ಮನುಷ್ಯರಾದ ಅಧ್ಯಕ್ಷರು ನಡವಳಿಕೆಯಿಂದ ಗೌರವ ಪಡೆದುಕೊಳ್ಳಬೇಕು ಎಂದು ಪಪಂ ಅಧ್ಯಕ್ಷರ ಗೈರು ಹಾಜರಿಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಒಟ್ಟು 14 ಕೋಟಿ ರೂಗಳ ಪಟ್ಟಣ ಅಭಿವೃದ್ಧಿ ಅನುದಾನ ತಡವಾಗಿ ಬಂದಿದೆ. ಈ ಪೈಕಿ ಮೊದಲ ಪ್ಯಾಕೇಜ್ 6 ಕೋಟಿ ರೂಗಳ ಕೆಲಸಕ್ಕೆ ಚಾಲನೆ ದೊರಕುತ್ತಿದೆ. ಪ್ರಮುಖ ಎಂಜಿ ರಸ್ತೆ ಹಾಗೂ ರೈಲ್ವೇ ಅಂಡರ್ ಪಾಸ್ ರಸ್ತೆಗೆ ಆದ್ಯತೆ ನೀಡಿದ್ದು ಒಟ್ಟು 3 ಕೋಟಿ ಮೀಸಲಿಡಲಾಗಿದೆ. ಈ ಜೊತೆಗೆ ಬಸ್ ಡಿಪೋ ನಿರ್ಮಾಣಕ್ಕೆ ಹಣ ಮೀಸಲಿದೆ. ಗುರುತಿಸಲಾದ ಭೂಮಿ ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಕ್ರಿಯೆ ನಡೆಸಿದೆ. ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ ಎಂದು ಭರವಸೆ ನೀಡಿದ ಅವರು ಯುಜಿಡಿ ಒಳಚರಂಡಿ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ ಕೊನೆಯ ಹಂತದಲ್ಲಿ ಭೂಮಿ ನೀಡಬೇಕಾದ ರೈತರು ಕೋರ್ಟ್ ಮೆಟ್ಟಿಲೇರಿ ತಡವಾಗಿದೆ. ಒಟ್ಟು ಬಾಕಿ 75 ಲಕ್ಷ ರೂಗಳನ್ನು ಕಟ್ಟಲು ಸೂಚಿಸಿದ್ದ ಸಂಸ್ಥೆಗೆ 45 ಲಕ್ಷ ರೂ ಕಟ್ಟಲಾಗಿತ್ತು. ಬಾಕಿ 30 ಲಕ್ಷ ರೂ ಕಟ್ಟುವ ಸಮಯಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್ ಬಾಬು, ಸದಸ್ಯರಾದ ಸಿ.ಮೋಹನ್, ಕುಮಾರ್, ರೇಣುಕಾ ಪ್ರಸಾದ್, ಶೋಕತ್ ಆಲಿ, ಮಂಗಳಮ್ಮ, ರಂಗಸ್ವಾಮಿ, ಮುಖ್ಯಾಧಿಕಾರಿ ಮಂಜುಳಾದೇವಿ, ಮುಖಂಡರಾದ ಬುಲೆಟ್ ಬಸವರಾಜು, ಚನ್ನಬಸವ, ಶಿವಪ್ಪ, ಜಿ.ವಿ.ಮಂಜುನಾಥ್ ಗುತ್ತಿಗೆದಾರ ಮಂಜುನಾಥ್ ಇತರರು ಇದ್ದರು.