ಗುಬ್ಬಿ: ನೂರು ರೂ ಮುಖಬೆಲೆಯ ಹಳೇ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ಹುಟ್ಟಿಸಿ ಮಹಿಳೆಗೆ ವಂಚಿಸಿ 9.60 ಲಕ್ಷ ರೂಗಳನ್ನು ಲಪಟಾಯಿಸಿದ್ದ ಐದು ಜನರ ಖದೀಮರ ತಂಡವನ್ನು ಬಂಧಿಸಿದ ರೋಚಕ ಘಟನೆ ಗುಬ್ಬಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ತುರುವೇಕೆರೆ ತಾಲ್ಲೂಕು ಸಂಪಿಗೆ ಹೊಸಹಳ್ಳಿ ವಾಸಿ ಮುತ್ತುರಾಜ್, ಬಾಣಸಂದ್ರ ಮೂಲದ ಪುನೀತ್, ತಿಪಟೂರು ನಿವಾಸಿ ವಸಂತಕುಮಾರ್, ಬಾಣಾವರದ ಮಹೇಶ್ ಹಾಗೂ ತುಮಕೂರು ಯಲ್ಲಾಪುರ ಗಂಗಾಧರ್ ಬಂಧಿತ ಆರೋಪಿಗಳು. ವಂಚನೆಗೆ ಒಳಗಾದ ಮಹಿಳೆ ಬೆಂಗಳೂರು ನಿವಾಸಿ ವಿಜಯಲಕ್ಷ್ಮೀ.
ಹಣದಾಸೆಗೆ ಬಲಿಯಾಗಿ 9.60 ಲಕ್ಷ ರೂಗಳನ್ನು ಖದೀಮರ ನೀಡಿದ್ದ ವಿಜಯಲಕ್ಷ್ಮೀ ಅವರಿಗೆ ಹಳೇ ನೂರು ರೂಗಳ ನೋಟುಗಳು ನಮ್ಮ ಬಳಿ ಇವೆ. ಡಬ್ಬಲಿಂಗ್ ಮಾಡಿ ಲಕ್ಷಕ್ಕೆ ಎರಡು ಲಕ್ಷ ನೀಡುವ ಆಸೆ ಹುಟ್ಟಿಸಿದ್ದರು.
ಆಶ್ರಮದಲ್ಲಿ ಹುಂಡಿ ಹಣವಿದೆ. ಎಲ್ಲವೂ ಹಳೇ ನೂರು ರೂಗಳ ನೋಟುಗಳು. ಅವುಗಳನ್ನು 50 ರಷ್ಟು ರಿಯಾಯಿತಿಯಲ್ಲಿ ನೀಡುವುದಾಗಿ ನಂಬಿಸಿದ್ದ ಖದೀಮರು 1800 ರೂಗಳು ಆರಂಭದಲ್ಲಿ ನೀಡಿ ಆಸೆಗೆ ನೀರೆರೆದು ನಂಬಿಕೆ ಬಲ ಪಡಿಸಿಕೊಂಡರು. ಜಾಣ್ಮೆ ತೋರಿದ್ದ ವಂಚಕರ ತಂಡ ಕಡಬ ನಿಟ್ಟೂರು ರಸ್ತೆಯಲ್ಲಿ ಬಂದು ಹಣ ಪಡೆಯಲು ಹೇಳಿದ್ದರು.
ಕಡಬ ನಿಟ್ಟೂರು ಮಧ್ಯೆ ನಲ್ಲಿಗೆರೆ ಶಿರಾ ರಾಜ್ಯ ಹೆದ್ದಾರಿಯಲ್ಲೇ ವ್ಯವಹಾರ ಕುದಿರಿಸುವ ಎಂದು ಮಹಿಳೆಯನ್ನು ಕರೆದಿದ್ದರು. 9.60 ಲಕ್ಷ ರೂಗಳನ್ನು ತನ್ನ ಒಡವೆಗಳನ್ನು ಗಿರವಿ ಇಟ್ಟು ಹಣವನ್ನು ಹೊಂದಿಸಿಕೊಂಡು ಸ್ಥಳಕ್ಕೆ ಬಂದ ಮಹಿಳೆಯ ಕೈಗೆ ಬೀಗ ಹಾಕಿದ್ದ ಕಪ್ಪು ಬಣ್ಣದ ಬ್ಯಾಗ್ ನೀಡಿ ನೀವು ಈ ಹಣವನ್ನು ರಸ್ತೆಯಲ್ಲಿ ಪರಿಶೀಲಿಸುವುದು ಬೇಡಾ ಮನೆಗೆ ನೋಡಿಕೊಳ್ಳುವಂತೆ ತಿಳಿಸಿದ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತರು. ಅಲ್ಲಿಂದ ಸ್ವಲ್ಪ ದೂರ ಪ್ರಯಾಣಿಸಿದ ಅವರು ಕುತೂಹಲ ತಡೆಯಲಾರದೆ ಕೀ ಇಲ್ಲದ ಬೀಗ ಹಾಕಿದ್ದ ಬ್ಯಾಗ್ ಹರಿದು ನೋಡಿದಾಗ ಮಹಿಳೆಗೆ ಬಿಳಿ ಬಣ್ಣದ ಕಾಗದದ ಕಂತೆಗಳು ಕಂಡು ಶಾಕ್ ಗೆ ಒಳಗಾದ ಮಹಿಳೆ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದರು.
ವಂಚನೆಯ ಪ್ರಕರಣ ಬೆನ್ನತ್ತಿದ್ದ ಗುಬ್ಬಿ ಪಿಎಸೈ ಮುತ್ತುರಾಜ್ ನೇತೃತ್ವದ ತಂಡ ಸಿಪಿಐ ನದಾಫ್ ಮಾರ್ಗದರ್ಶನದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 5.58 ಲಕ್ಷ ರೂಗಳನ್ನು ಮಹಿಳೆಗೆ ಹಿಂದಿರುಗಿಸಿದರು. ಪ್ರಕರಣ ಭೇದಿಸಿದ ತಂಡದಲ್ಲಿ ಸಿಬ್ಬಂದಿಗಳಾದ ಪಾತರಾಜ್, ಮಧು, ನವೀನ್ ಗೌಡ, ಮಧುಸೂದನ್, ರಂಗನಾಥ್, ದೇವರಾಜ್ ಇದ್ದರು.