ತುಮಕೂರು: ಮದ್ಯ ಸೇವಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಆರೋಪದಲ್ಲಿ ತಾಲೂಕಿನ ಗಳಿಗೇನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗಲಕ್ಷ್ಮಮ್ಮ ಅವರನ್ನು ಅಮಾನತು ಮಾಡಲಾಗಿದೆ.
ತುಮಕೂರು ಜಿಲ್ಲೆಯ ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ಗಂಗಲಕ್ಷ್ಮಮ್ಮ ಎಂಬ ಶಿಕ್ಷಕಿಗೆ ಕುಡಿತದ ಚಟ ಇದ್ದು, ನಿತ್ಯ ಮದ್ಯ ಸೇವನೆ ಮಾಡಿಯೇ ಶಾಲೆಗೆ ಬರುತ್ತಿದ್ದಳು. ಸಾಲದು ಎಂಬಂತೆ ಎಣ್ಣೆ ನಶೆ ಇಳಿದಾಗ ಮತ್ತೇರಿಲು ತನ್ನ ಡ್ರವರ್ ಒಳಗೂ ಮದ್ಯದ ಬಾಟಲ್ಗಳನ್ನು ಇರಿಸಿಕೊಂಡಿದ್ದಾಳೆ. ಸದಾ ಎಣ್ಣೆ ಏಟಿನಲ್ಲೇ ಇರುತ್ತಿದ್ದ ಗಂಗಲಕ್ಷ್ಮಮ್ಮ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಕಿರಿಕ್ ಮಾಡಿಕೊಳ್ಳುತ್ತಿದ್ದಳು. ಅಷ್ಟೇ ಅಲ್ಲದೆ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದಳು.
ಕಳೆದ 20 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಂಗಲಕ್ಷ್ಮಮ್ಮನ ಪ್ರತಿನಿತ್ಯ ಜಗಳಕ್ಕೆ ಬೇಸತ್ತಿದ್ದಾರೆ. ಇಂದು ಸರಿಹೋಗಬಹುದು, ನಾಳೆ ಬುದ್ಧಿ ಬರಬಹುದು ಎಂದು ಯೋಚಿಸುತ್ತಿದ್ದ ಶಿಕ್ಷಕರೆಲ್ಲರೂ ಆಕೆಗೆ ಜನ್ಮದಲ್ಲಿ ಬುದ್ಧಿ ಬರಲ್ಲ ಎಂದು ಅರಿತು ಬೇರೆ ಕಡೆಗೆ ವರ್ಗಾವಣೆ ಪಡೆದು ಹೋಗುತ್ತಿದ್ದಾರೆ. ಪೊಲೀಸರು ಮತ್ತು ಗ್ರಾಮಸ್ಥರು ಶಾಲೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಲು ಮುಂದಾದಾಗ ಪೊಲೀಸರ ಕರ್ತವ್ಯಕ್ಕೂ ಆಕೆ ಅಡ್ಡಿಪಡಿಸಿದ್ದಾಳೆ. ಅನಿವಾರ್ಯವಾಗಿ ಗ್ರಾಮಸ್ಥರು ಟೇಬಲ್ ಅನ್ನು ಹೊರತಂದು ಬೀಗ ಒಡೆದು ಡ್ರವರ್ ತೆರೆದಿದ್ದಾರೆ. ಈ ವೇಳೆ ಮದ್ಯದ ಬಾಟಲ್ಗಳು ಪತ್ತೆಯಾಗಿವೆ.
ಮದ್ಯದ ಬಾಟಲ್ಗಳು ಪತ್ತೆಯಾಗುತ್ತಿದ್ದಂತೆ ಗಂಗಲಕ್ಷ್ಮಮ್ಮ ಆತ್ಮಹತ್ಯೆಯ ನಾಟಕವಾಡಿದ್ದಾಳೆ. ಶಾಲೆ ಕೊಠಡಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆಕೆಯನ್ನು ಬಿಇಓ ವಾಹನದಲ್ಲಿ ಕೂರಿಸಿಕೊಂಡು ಕರೆದೊಯ್ಯಲಾಯಿತು.
ಸದ್ಯ ಎಣ್ಣೆ ಶಿಕ್ಷಕಿ ಡ್ರವರ್ನಲ್ಲಿ ಪತ್ತೆಯಾದ ಮದ್ಯದ ಬಾಟಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಶಾಲೆಗೆ ಬೀಗ ಜಡಿದು ಶಿಕ್ಷಕಿಯರನ್ನ ವರ್ಗಾವಣೆ ಮಾಡುವಂತೆ ಪಟ್ಟು ಹಿಡಿದಿದ್ದು, ಎಣ್ಣೆ ಶಿಕ್ಷಕಿ ನಮ್ಮ ಮಕ್ಕಳಿಗೆ ಬೇಡವೇ ಬೇಡವೆಂದು ಪಟ್ಟುಹಿಡಿದಿದ್ದಾರೆ.
ಜತೆಗೆ ಇದೇ ಶಾಲೆಯ ನಾಗರತ್ನಮ್ಮ ಅವರನ್ನೂ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪೋಷಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಶಿಕ್ಷಕಿ ಗಂಗಲಕ್ಷ್ಮಮ್ಮ ಅವರ ಟೇಬಲ್ ಒಳಗಡೆ ಮದ್ಯದ ಬಾಟಲಿ ಪತ್ತೆಯಾಗಿದೆ.
ಘಟನೆಯನ್ನು ಸೂಕ್ಷ್ಮವಾಗಿ ಅರಿತ ಶಿಕ್ಷಣ ಇಲಾಖೆ ಶಿಕ್ಷಕಿ ಗಂಗಲಕ್ಷ್ಮಮ್ಮಳನ್ನು ಇಲಾಖಾ ವಿಚಾರಣೆಗೆ ಒಳಪಡಿಸಿದೆ.