ಗುಬ್ಬಿ: ತಾಲ್ಲೂಕಿನ ನಿಟ್ಟೂರು ಶ್ರೀ ಬೇಡರ ಕಣ್ಣಪ್ಪ ದೇವಾಲಯದಲ್ಲಿ
ಪ್ರತಿಷ್ಠಾಪಿಸಿರುವ ಶ್ರೀ ಸ್ವರ್ಣ ಗೌರಿ ಶ್ರೀ ಸತ್ಯ ಗಣಪತಿ ಉತ್ಸವ ಅಂಗವಾಗಿ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ಮಕ್ಕಳ ಭರತನಾಟ್ಯ ನೃತ್ಯ ನೋಡುಗರ ಕಣ್ಮನ ಸೆಳೆಯಿತು.
ತುರುವೇಕೆರೆ ತಾಲ್ಲೂಕಿನ ಸಂಪಿಗೆ ಗ್ರಾಮದ ಶ್ರೀ ವೆಂಕಟೇಶ್ ಪ್ರಸಾದ್ ಅವರ “ಸಾಗರ ಲೋಕ ನೃತ್ಯ ಕೇಂದ್ರ” ದ ಪುಟ್ಟ ಮಕ್ಕಳಿಂದ ಭರತನಾಟ್ಯ, ಜನಪದ ನೃತ್ಯ ಪ್ರದರ್ಶಿಸಲಾಯಿತು. ನೆರೆದಿದ್ದ ಗ್ರಾಮದ ಜನತೆಗೆ ರಸದೌತಣ ನೀಡಿದ ಮಕ್ಕಳ ಕಲೆ ಆಕರ್ಷಣೀಯವಾಗಿತ್ತು. ನಿಟ್ಟೂರು ಗ್ರಾಮದ ಸತ್ಯ ಗಣಪತಿ ಯುವಕರ ಬಳಗ ವಿಸರ್ಜನಾ ಮಹೋತ್ಸವದ ಅಂಗವಾಗಿ ಈ ಮನರಂಜನಾ ಕಾರ್ಯಕ್ರಮ ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಭರತನಾಟ್ಯ ಸಾಂಸ್ಕೃತಿಕ ಪ್ರತೀಕವಾದ ಕಲೆ ಆಗಿದೆ. ನಮ್ಮ ಪರಂಪರೆ ಬಿಂಬಿಸುವ ಈ ನೃತ್ಯ ಶಾಸ್ತ್ರೀಯ ಬದ್ದವಾಗಿದೆ. ಈ ಜೊತೆಗೆ ಗ್ರಾಮೀಣ ಸೊಗಡಿನ ಜನಪದ ನೃತ್ಯ ಪ್ರತಿಭೆಯನ್ನು ಮೈಗೂಡಿಸಿಕೊಂಡಿರುವ ಮಕ್ಕಳ ಕಲೆಗೆ ಬೆಲೆ ಕಟ್ಟಲಾಗದು ಎಂದರು.
ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿ ಕಲ್ಮಶ ಇಲ್ಲದ ಮಕ್ಕಳ ಪ್ರತಿಭೆಗೆ ಸದಾ ಪ್ರೋತ್ಸಾಹ, ಪುರಸ್ಕಾರ ಸಿಗಬೇಕು. ನಾವುಗಳು ಮಕ್ಕಳ ಪ್ರತಿಭೆಯನ್ನು ಗೌರವಿಸಿ ಆಸಕ್ತಿಗೆ ನೀರೆರೆದು ಪೋಷಿಸೋಣ. ಗಣೇಶ, ರಾಜ್ಯೋತ್ಸವ ಹೀಗೆ ಅನೇಕ ಸ್ಥಳೀಯ ಕಾರ್ಯಕ್ರಮದಲ್ಲಿ ನಮ್ಮ ಹಳ್ಳಿ ಮಕ್ಕಳ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುವ ಕೆಲಸ ಸಂಘ ಸಂಸ್ಥೆಗಳು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಾಗರಾಜು, ನಿವೃತ್ತ ಶಿಕ್ಷಕ ರಾಮಚಂದ್ರಮೂರ್ತಿ, ನಿ.ಗು.ಚನ್ನಬಸವಯ್ಯ, ಪ್ರೀತಿ, ಅನುಷ, ಸೌಮ್ಯ ವೆಂಕಟೇಶ್ ಇತರರು ಇದ್ದರು.