ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸರಳವಾಗಿ ಆಚರಿಸಲಾಯಿತು.
ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಮಾತನಾಡಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥ ಸಾಮಾಜಿಕ ಚಿತ್ರಣ ಜೊತೆಗೆ ಮನುಷ್ಯನ ಬದುಕಿನ ಆಯಾಮವನ್ನು ಬಿಂಬಿಸುತ್ತದೆ. ರಾಮಾಯಣ ನಮ್ಮ ಧರ್ಮದ ಪವಿತ್ರ ಗ್ರಂಥವಾಗಿ ಪೂಜಿಸಲ್ಪಟ್ಟಿದೆ ಎಂದರು.
ಎಸ್ಸಿ ಎಸ್ಟಿ ಮೀಸಲಾತಿ ಹೋರಾಟ ಕ್ರಿಯಾ ಸಮಿತಿ ಜಿಲ್ಲಾ ಸದಸ್ಯ ರಾಮಚಂದ್ರಪ್ಪ ಮಾತನಾಡಿ ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಜಯಂತಿ ಆಚರಣೆಗೆ ನಮ್ಮ ಸಮಾಜ ವಿರೋಧಿಸಿತ್ತು. ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಮನ್ನಣೆ ನೀಡಿದ ಹಿನ್ನಲೆ ಆಚರಣೆಯನ್ನು ಇಂದು ಸರಳ ಆಚರಣೆ ನಡೆಸಲಾಗಿದೆ. ಕೆಲ ದಿನದಲ್ಲಿ ಅದ್ದೂರಿ ಆಚರಣೆಗೆ ಸಮಾಜ ಸಿದ್ಧತೆ ನಡೆಸಿದೆ ಎಂದರು.
ತಾಪಂ ಇಓ ಶಿವಪ್ರಕಾಶ್ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಹಾಕಿಕೊಟ್ಟ ಮಾರ್ಗ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅತ್ಯಗತ್ಯ. ಅವರ ಆದರ್ಶಗಳನ್ನು ಬದುಕಿಗೆ ಅಳವಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಹೇರೂರು ನಾಗರಾಜು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಪಶು ವೈದ್ಯಾಧಿಕಾರಿ ಡಾ.ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಶಿರಸ್ತೇದಾರ್ ಶ್ರೀರಂಗ, ಕಂದಾಯ ನಿರೀಕ್ಷಕ ರಮೇಶ್ ಇತರರು ಇದ್ದರು.
ವರದಿ: ಜಿ.ಆರ್.ರಮೇಶ್ ಗೌಡ, ಗುಬ್ಬಿ.